ನಚಿಕೇತ
ಭೂಮಿ ಇರುವುದೇ ಮನುಷ್ಯರು ತಾವು ಮಾಡಿದ ಪಾಪ- ಪುಣ್ಯ ಅನುಭವಿಸುವುದಕ್ಕಾಗಿ. ಹಾಗಾಗಿ ಇಲ್ಲಿ ಜನ್ಮ ಎತ್ತುವ ಮನುಷ್ಯರಿಗೆ ಕಾಮನೆಗಳು ಜಾಸ್ತಿ. ಅದರಲ್ಲಿಯೂ ಎಳ್ಳಷ್ಟೂ ಕಷ್ಟ ಪಡದೇ ಸ್ವರ್ಗ ಸುಖ ಸಿಗುತ್ತದೆ ಎಂದರೆ ಕಣ್ಣುಮುಚ್ಚಿ ಒಪ್ಪಿಬಿಡುತ್ತಾರೆ. ಆದರೆ ನಚಿಕೇತನಿಗೆ ಮಾತ್ರ ತಾನಾಗಿಯೇ ಬೇಕಾದ ಸೌಕರ್ಯಗಳು ಒದಗಿ ಬಂದರೂ ಆತ ಅದನ್ನು ಬಯಸದೇ ತನ್ನ ಚಿತ್ತ ಸ್ವಾಸ್ಥ್ಯ ಕಾಪಾಡಿಕೊಳ್ಳುತ್ತಾನೆ. ಆಗ ಆಗಿದ್ದ ವಯಸ್ಸಾದರೂ ಎಷ್ಟು ನಚಿಕೇತನಿಗೆ? ಚಿಕ್ಕ ಮಗು ಅವನು. ಆದರೂ ತನ್ನ ಗುರಿಯ ಬಗ್ಗೆ ಅಚಲ ನಿರ್ಧಾರ ಆತನದ್ದು. ಎಂಥೆಂಥಹಾ ಪ್ರಲೋಭನೆಗಳು ಆತನ ಗುರಿಯನ್ನು ಬದಲಿಸಲು ಆಗಲಿಲ್ಲ. ಅವನ ಗುರಿ ಒಂದೇ ಬ್ರಹ್ಮಜ್ಞಾನ ಪಡೆಯುವುದು. ಚಿಕ್ಕಂದಿನಿಂದಲೇ ಆತನ ಮನಸ್ಸು ಪಾಪ-ಪುಣ್ಯಗಳನ್ನು ವಿಶ್ಲೇಷಿಸುತ್ತಿತ್ತು. ಆದರೆ ಆತ ಬೆಳೆಯುತ್ತಿದ್ದ ಪರಿಸರದಲ್ಲಿ ಪಾಪ-ಪುಣ್ಯಗಳ ಬಗ್ಗೆ ಅಗಾಧವಾದ ಜ್ಞಾನ ಹೊಂದಿರಲು ಸಾಧ್ಯವಿರಲಿಲ್ಲ. ಹಾಗಾಗಿ ಇದರ ಬಗ್ಗೆ ಸರಿಯಾದ ಮಾಹಿತಿ ನೀಡುವುದು ಮನುಷ್ಯ ಮಾತ್ರದವರಿಂದ ಸಾಧ್ಯವಿಲ್ಲ, ಯಮಧರ್ಮರಾಯ ಒಬ್ಬನೇ ಇದಕ್ಕೆ ಸರಿಯಾದ ವ್ಯಕ್ತಿ ಎಂದು ನಚಿಕೇತನಿಗೆ ಗೊತ್ತಿತ್ತು. ಅಷ್ಟೇ ಹೊರತೂ ಯಮಧರ್ಮನ ಬಳಿ ಕೇಳಬೇಕೆಂದರೆ ತಾನು ಸಾಯಬೇಕು ಎಂಬ ವಿಚಾರ ಆ ಮಗುವಿಗೆ ಅರಿವಿರಲಿಲ್ಲ. ಸಾವು ಎಂಬ ಪದವೇ ಗೊತ್ತಿಲ್ಲದ ಮುಗ್ಧ ಬಾಲಕ ಅವನು. ಎಂದಾದರೊಂದು ದಿನ ತಾನು ಯಮನನ್ನು ನೋಡಿಯೇ ನೋಡುತ...